ಶನಿವಾರ, ಫೆಬ್ರವರಿ 1, 2014




ಯಕ್ಷ ಮೂರ್ತಿ ಕರ್ತಾರ -ಕೃಷ್ಣಮೂರ್ತಿ ಉಪ್ಪೂರ
ಹೊಸ ಮನೆಯ ಮುಂದೆ ದೃಷ್ಠಿ ಗೊಂಬೆಗಳನ್ನು, ಶೋಕೇಸಿನಲ್ಲಿ ಬಣ್ಣ ಬಣ್ಣದ ಗೊಂಬೆಗಳನ್ನು ಇಡುವುದನ್ನು ನೋಡಿದ್ದೇವೆ. ಅವುಗಳು ಯಕ್ಷಗಾನದ ಗೊಂಬೆಗಳೂ ಇರಬಹುದು, ಕಥಕ್ಕಳಿ ಗೊಂಬೆಗಳೂ ಇರಬಹುದು. ಆದರೆ ಕಥಕ್ಕಳಿ ಗೊಂಬೆಗಳ ಮುಖವರ್ಣಿಕೆಗೂ, ಯಕ್ಷಗಾನ ಗೊಂಬೆಗಳ ಮುಖವರ್ಣಿಕೆಗೂ ಬಳಸುವ ಬಣ್ಣಗಳಲ್ಲಿ ವ್ಯತ್ಯಾಸವಿದೆ. 1969 ರಲ್ಲಿ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಾಗಲೇ ನಾನಿದನ್ನು ಗಮನಿಸಿದ್ದೆ. 1983 ರಿಂದಲೇ ಯಕ್ಷಗಾನದ ಗೊಂಬೆಗಳನ್ನು ತಯಾರಿಸಲು ಪ್ರಾರಂಭಿಸಿದ್ದ ನಾನು ಮುಖವರ್ಣಿಕೆಯ ಸೂಕ್ಷ್ಮರೇಖೆಗಳನ್ನು, ಬಣ್ಣಗಳನ್ನು ಯಕ್ಷಗಾನ ಗೊಂಬೆಯಲ್ಲಿ ತರಲು ಪ್ರಯತ್ನಿಸಿದೆ ” ಎನ್ನುತ್ತಾರೆ, ಬೆಂಗಳೂರಿನ ಯಕ್ಷಗಾನ ಗೊಂಬೆಗಳ ತಯಾರಕ ಕೃಷ್ಣಮೂರ್ತಿ ಉಪ್ಪೂರರು. ಬಡಗುತಿಟ್ಟಿನ ಪ್ರಸಿದ್ಧ ಭಾಗವತರಾಗಿದ್ದ ಪ್ರಾಚಾರ್ಯ ಮಾರ್ವಿ ನಾರಾಣಪ್ಪ ಉಪ್ಪೂರರ ಪುತ್ರರಾಗಿ, ಬಾಲ್ಯದಿಂದಲೇ ಯಕ್ಷಗಾನದ ಬಗ್ಗೆ, ಚಿತ್ರಕಲೆಯ ಬಗ್ಗೆ ಆಸಕ್ತಿ ತಳೆದಿದ್ದ ಇವರಿಗೆ ಮೈಸೂರಿನಲ್ಲಿ ಕಲಿತ ಚಿತ್ರಕಲೆಯ ಅಭ್ಯಾಸ ಯಕ್ಷಗಾನದ ಗೊಂಬೆ ತಯಾರಿಕೆಗೆ ಪ್ರೇರಣೆ ಒದಗಿಸಿತು. ಶ್ರೀ ಎಚ್. ಆರ್. ಶೇಷಾದ್ರಿಯವರು ಕೃಷ್ಣಮೂರ್ತಿಯವರ ಚಿತ್ರಕಲೆಯ ಗುರುಗಳು. ಮುಂದೆ ಶ್ರೀವಾದಿರಾಜರವರಲ್ಲಿ ಶಿಲ್ಪಕಲೆಯ ಬಗ್ಗೆ ತರಬೇತಿಯನ್ನು ಪಡೆದು ಪರಿಣತಿ ಹೊಂದಿದ್ದರು.
   ಆಗಲೇ ಬ್ರಹ್ಮಾವರ ಪರಿಸರದ ಪ್ರಸಿದ್ಧ ಸಾಹಿತಿ ಬೈಕಾಡಿ ವೆಂಕಟಕೃಷ್ಣರಾಯರು ಇವರ ಬಗ್ಗೆ 80 ರ ದಶಕದಲ್ಲಿಯೇ ‘ಉದಯವಾಣಿ’ ಪತ್ರಿಕೆಯಲ್ಲಿ ಶ್ರೀ ಕೃಷ್ಣಮೂರ್ತಿ ಉಪ್ಪೂರರ ಯಕ್ಷಗಾನ ಗೊಂಬೆಗಳ ತಯಾರಿಕೆಯ ಬಗ್ಗೆ ಹೊಗಳಿ ಸಚಿತ್ರ ಲೇಖನವನ್ನು ಬರೆದಿದ್ದರು. ಇದರಲ್ಲಿ ಶ್ರೀ ನಾಗರಾಜ ವಾರಂಬಳ್ಳಿಯವರು ಈ ಯಕ್ಷಗಾನದ ಗೊಂಬೆಗಳ ಚಿತ್ರವನ್ನು ಒದಗಿಸಿದ್ದರು. ಅಲ್ಲದೇ ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್, ಪ್ರಕಾಶ ವಾರಪತ್ರಿಕೆಯಲ್ಲೂ ಇವರ ಗೊಂಬೆ ತಯಾರಿಕೆಯ ಕಾರ್ಯದ ಬಗ್ಗೆ ಶ್ಲಾಘಿಸಿ ಲೇಖನಗಳೂ ಪ್ರಕಟವಾಗಿತ್ತು.
  ಕಾರಣಾಂತರದಿಂದ ಕೆಲವು ಕಾಲ ಗೊಂಬೆ ತಯಾರಿಕೆಯನ್ನು ನಿಲ್ಲಿಸಿದ್ದ ಉಪ್ಪೂರರು ಈಗ ಪುನಃ ಗೊಂಬೆಯನ್ನು ತಯಾರಿಸಲು ಆಧುನಿಕ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮೊದಲು ಗೊಂಬೆಗಳನ್ನು ಪ್ಲಾಸ್ಟರ್ ಆಫ್ ಪ್ಯಾರಿಸಿನಲ್ಲಿ ತಯಾರಿಸಿದ್ದು ಅನಂತರ ಪೇಪರ್ಪಲ್ಪ್ ಪುಡಿಯ ಹಿಟ್ಟಿನಿಂದ ಗೊಂಬೆಗಳನ್ನು ತಯಾರಿಸಿದರು. ಆಗೆಲ್ಲಾ ಗೊಂಬೆಯ ಮೂಗು, ತುರಾಯಿಯ ತುದಿ ಇತ್ಯಾದಿ ಭಾಗಗಳು ಡ್ಯಾಮೇಜ್ ಆಗಿ ತೊಂದರೆಯಾಗುತಿತ್ತು. ಹಾಗಾಗಿ ಈಗ  ಮೂರ್ತಿಯ ಮೌಲ್ಡ್ ಮಾಡಿಕೊಂಡು ಫೈಬರ್ ನಿಂದ ಶಾಸ್ತ್ರೀಯ ವಿಧಾನವನ್ನು ಅಳವಡಿಸಿ  ಬಣ್ಣ ಹಾಕಿ ಗೊಂಬೆಗಳನ್ನು ತಯಾರಿಸುತ್ತಿದ್ದಾರೆ. ಸಾಮಾನ್ಯವಾಗಿ ಯಕ್ಷಗಾನದ ಗೊಂಬೆ ತಯಾರಿಸುವವರು ಮುಖವರ್ಣಿಕೆಯನ್ನು ಮಾಡುವ ಬದಲು ಮುಖದ ಚಿತ್ರವನ್ನು ಅಂಟಿಸಿಯೋ ಅಥವಾ ಮುಖವನ್ನೇ ಮಾಡದೆಯೋ ಗೊಂಬೆಗಳನ್ನು ತಯಾರಿಸುತ್ತಿದ್ದರೆ ಉಪ್ಪೂರರು ಕಣ್ಣು, ಬಾಯಿ, ತಿಲಕ ಇತ್ಯಾದಿ ಸೂಕ್ಷ್ಮ ಭಾಗಗಳ ಬಣ್ಣಗಳನ್ನೂ ಹಾಕಿ, ಕೇದಗೆ ಮುಂದಲೆಯ ಜರಿಯನ್ನೂ ಬರೆದೇ ಮಾಡುವುದರಿಂದ ಮಾನವ ಸಂಪನ್ಮೂಲ ಹೆಚ್ಚಾಗಿ ಗೊಂಬೆಯನ್ನು ಸಾಮಾನ್ಯ ದರದಲ್ಲಿ ಮಾರಾಟ ಮಾಡಲು ಕಷ್ಟ ಸಾಧ್ಯವೆಂಬ ಕೊರಗಿನ ಮಧ್ಯೆಯೂ ಆಸಕ್ತರಿಗೆ ಯೋಗ್ಯವಾದ ಬೆಲೆಗೆ ಗೊಂಬೆಗಳನ್ನು ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸನ್ಮಾನ, ಸಭೆ, ಸಮಾರಂಭಗಳಲ್ಲಿ ನೆನಪಿನ ಕಾಣಿಕೆ ಕೊಡುವಾಗ ಕರ್ನಾಟಕದ ಹೆಮ್ಮೆಯ ಯಕ್ಷಗಾನದ ಇಂತಹ ಸುಂದರ ಮೂರ್ತಿಗಳನ್ನು ಶಾಶ್ವತ ಕಾಣಿಕೆಯಾಗಿ ಕೊಡುವುದರಲ್ಲಿ ಸಾರ್ಥಕತೆ ಇದೆ. ಉಪ್ಪೂರರು ಯಕ್ಷಗಾನದ ಕಪ್ಪು, ಕೆಂಪು, ಹಸಿರು ಕೇದಗೆ ಮುಂದಲೆ, ಮೈಂದ, ದ್ವಿವಿಧರಂತಹ ವಾನರಗಳ ಸಂಪ್ರದಾಯ ಮುಖವರ್ಣಿಕೆಯುಳ್ಳ ಕೇದಗೆ ಮುಂದಲೆ, ಕಪ್ಪು ಕೆಂಪು, ಹಸಿರು ಮುಂಡಾಸು ವೇಷಗಳು, ಗಂಧರ್ವ, ಕರ್ಣ ಪಾತ್ರದ ಮುಂಡಾಸುಗಳ ಗೊಂಬೆಗಳನ್ನು ತಯಾರಿಸುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಇವರ ಕೌಶಲದಿಂದ ಮೂಡಿ ಬರುವ  ಸೂಕ್ಷ್ಮ ರೇಖೆಗಳ, ಮುಖವರ್ಣಿಕೆಯ ಬಣ್ಣದ ರಾಕ್ಷಸ ವೇಷದ ಗೊಂಬೆಗಳು ಅತ್ಯಾಕರ್ಷಕವಾಗಿದೆ. ಆದರೆ ಸ್ತ್ರೀ ವೇಷ, ಹಾಸ್ಯ, ಕಿರೀಟ ವೇಷದಂತಹ ಗೊಂಬೆಗಳನ್ನೂ ತಯಾರಿಸುವ ಬಗ್ಗೆ ಮುಂದೆ ಅವರು  ಪ್ರಯತ್ನಿಸಬಹುದು.



    
 










 ಈ ಬಗ್ಗೆ ನಿಮಗೆ ತಿಳಿದುಕೊಳ್ಳಬೇಕಿದ್ದರೆ ಗೊಂಬೆಗಳನ್ನು ಕೊಂಡುಕೊಳ್ಳಬೇಕಿದ್ದರೆ ಶ್ರೀ ಕೃಷ್ಣಮೂರ್ತಿ ಉಪ್ಪೂರರನ್ನು ಅವರ ಮೊಬೈಲ್ ಸಂಖ್ಯೆ 9449545170  ಕ್ಕೆ ಸಂಪರ್ಕಿಸಬಹುದು.


ಡಾ. ಶ್ರೀಧರ ಉಪ್ಪೂರ 
ಅಂಚೆ- ಕೋಟೇಶ್ವರ, ಕುಂದಾಪುರ ತಾಲೂಕು
ಉಡುಪಿ ಜಿಲ್ಲೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ